*ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ವ್ಯಕ್ತಿ*
ಕೊಪ್ಪ ತಾಲ್ಲೂಕಿನ ಕುದ್ರೆಗುಂಡಿ ಬಳಿಯ ಬೆಳ್ಳೂರಿನ ಮಂಜುನಾಥ್ ಶೆಟ್ಟಿ ಎಂಬುವ ವ್ಯಕ್ತಿ ಆಟೋ ಪಲ್ಟಿಯಾಗಿ ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿ ಮೆದುಳು ನಿಷ್ಕ್ರಿಯಗೊಂಡು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬದುಕವುದು ಕಷ್ಟ ಎಂದು ವೈದ್ಯರು ತಿಳಿಸಿದಾಗ ,ಅವರ ಕುಟುಂಬದವರು ಅವರ ದೇಹದ ಉಳಿದ ಭಾಗಗಳಾದ ಕಿಡ್ನಿ, ಲಿವರ್ ಮತ್ತು ಕಣ್ಣುಗಳನ್ನು ದಾನ ಮಾಡಿ ಸುಮಾರು 5 ಜನರಿಗೆ ಜೀವನ ನೀಡುವ ಮಹತ್ವದ ನಿರ್ಧಾರ ಮಾಡಿದರು. ತಕ್ಷಣವೇ ಅಮ್ಮ ಫೌಂಡೇಶನ್ ಟ್ರಸ್ಟಿನ ಶ್ರೀ ಸುಧಾಕರ್ ಶೆಟ್ಟಿ ಅವರ ಮಾರ್ಗದರ್ಶನದಂತೆ ಮಣಿಪಾಲ್ ನಿಂದ ಮಂಜುನಾಥ್ ಶೆಟ್ಟಿ ಅವರನ್ನು ಕೊಪ್ಪದ ಪ್ರಶಮನಿ ಆಸ್ಪತ್ರೆಗೆ ವೆಂಟಿಲೇಟರ್ ನಲ್ಲೇ ಕರೆದುಕೊಂಡು ಬಂದರು. ಮಾನವೀಯತೆ ಆಧಾರದ ಮೇಲೆ ವ್ಯಕ್ತಿ ಬದುಕಿದ್ದಾಗಲೇ ಅಂಗಾಂಗ ದಾನ ಮಾಡಲು ಸರ್ಕಾರದ ಅನುಮತಿ ಪಡೆದು ಕೊಪ್ಪದ ಪ್ರಶಮನಿ ಆಸ್ಪತ್ರೆಯಲ್ಲಿ ಮಂಗಳೂರಿನ ಎ.ಜೆ.ಆಸ್ಪತ್ರೆ ಮತ್ತು ಮಣಿಪಾಲ್ ಆಸ್ಪತ್ರೆ ಯ ನುರಿತ ವೈಧ್ಯರ ಸಹಾಯದೊಂದಿಗೆ ಶಸ್ತ್ರಚಿಕಿತ್ಸೆ ಮಾಡಿ ಮಂಜುನಾಥ್ ಅವರ ಕಿಡ್ನಿ ,ಲಿವರ್, ಮತ್ತು ಎರಡು ಕಣ್ಣುಗಳನ್ನು ಅಗತ್ಯ ವಿರುವ ವ್ಯಕ್ತಿಗಳ ಜೀವ ಉಳಿಸಲು ನೀಡಲಾಯಿತು. ತಮ್ಮ ಕುಟುಂಬದ ಸದಸ್ಯನ ದುಖಃದ ಸಂದರ್ಭದಲ್ಲಿ ಸಹ ಇಂತಹ ಮಹತ್ವದ ನಿರ್ಧಾರ ಮಾಡಿ ಮಹಾನ್ ಕಾರ್ಯಕ್ಕೆ ಕೈಜೋಡಿಸಿ, ಜೀವನಸಾರ್ಥಕತೆ ಮೆರೆದ ಮಂಜುನಾಥ್ ಅವರ ಪತ್ನಿ ಮತ್ತು ಕುಟುಂಬಕ್ಕೆ ಪ್ರಶಮನಿ ಆಸ್ಪತ್ರೆ ವೈಧ್ಯರಾದ ಡಾ: ಉದಯಶಂಕರ್ ಮತ್ತು ಆಡಳಿತಾಧಿಕಾರಿ ಶ್ರೀ ಮತಿ ರೇಖಾ ಉದಯಶಂಕರ್ ಅವರು ಅನಂತಾನಂತ ಕೃತಜ್ಞತೆ ಸಲ್ಲಿಸಿದ್ದಾರೆ. ಮತ್ತು ಈ ತರಹದ ಅಪರೂಪದ ಅಂಗಾಂಗ ದಾನ ಕಾರ್ಯ ಕೊಪ್ಪ ಪ್ರಶಮನಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆದ ಬಗ್ಗೆ ಮಾಹಿತಿ ನೀಡಿ ,ಮುಂದೆ ಆ ಕುಟುಂಬದ ಸದಸ್ಯರಿಗೆ ದೇವರು ಒಳ್ಳೆಯ ಬೆಳಕು ನೀಡಲಿ ಎಂದು ತಿಳಿಸಿ ನಮನಗಳನ್ನು ಅರ್ಪಿಸಿರುತ್ತಾರೆ.